ಹೊನ್ನಾವರ : ತಾಲೂಕಿನ ಗುಣವಂತೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ವತಿಯಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಮಂಡಳಿ ೯೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಫೆಬ್ರವರಿ ೨೨ ರಿಂದ ಮಾರ್ಚ ೨ ರವರೆಗೆ ೯ ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಕರೆಮನೆ ಶಿವಾನಂದ ಹೆಗಡೆ ತಿಳಿಸಿದರು.
ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿದಿನ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ, ಪ್ರಶಸ್ತಿ ಪ್ರಧಾನ ನಡೆಯಲಿವೆ. ವಿವಿಧ ರಾಜ್ಯಗಳ ಕಲಾವಿದರು ಕಲಾಪ್ರದರ್ಶನ ನೀಡುವರು. ಈ ವರ್ಷ ವಿಶೇಷವಾಗಿ ದಿ. ಹೊಸ್ತೋಟ ಮಂಜುನಾಥ ಭಾಗವತರ ಕುರಿತು ವಿಚಾರಗೋಷ್ಠಿ, ಎರಡು ದಿನ ತಾಳಮದ್ದಳೆ, ಕೊನೆಯ ದಿನ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮಂಡಳಿ ೯೦ ವರ್ಷ ತುಂಬಿದ ಹಿನ್ನೆಯಲ್ಲಿ ಮಂಡಳಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಎಲ್ಲ ಹಿರಿಯ ಹಾಗೂ ಹೊಸ ಕಲಾವಿದರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಭರತನಾಟ್ಯ, ಕಥಕ್ಕಳಿ, ಗಮಕವಾಚನ, ವಯಲಿನ್ ಜುಗಲ್ಬಂಧಿ, ನಾಟಕ, ಮೂಕಾಭಿನಯ, ಕೊಳಲುವಾದನ, ಗೀತ ರಾಮಾಯಣ, ಹಿಂದೂಸ್ಥಾನಿ ಸಂಗೀತ, ಅಹೋರಾತ್ರಿ ಯಕ್ಷಗಾನ ಮುಂತಾದವು ಪ್ರದರ್ಶನಗೊಳ್ಳಲಿವೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ೧೦೦ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರು ಕಲಾಪ್ರದರ್ಶನದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ
ಫೆಬ್ರವರಿ ೨೨ರಂದು ಉದ್ಘಾಟನಾ ಸಮಾರಂಭದಲ್ಲಿ ಕರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತಿಗೆ ಪ್ರಧಾನ ಮಾಡಲಾಗುವುದು. ಫೆಬ್ರವರಿ ೨೩ರಂದು ಸಭಾಕಾರ್ಯಕ್ರಮದಲ್ಲಿ ಕೆರೆಮನೆ ಗಜಾನನ ಹೆಗಡೆ ಪ್ರಶ್ತಿಯನ್ನು ಯಕ್ಷಗಾನ ಕಲಾವಿದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆರೆಮನೆ ಶ್ರೀಧರ ಹೆಗಡೆ, ಕೆ.ಜಿ.ಹೆಗಡ ಅಪ್ಸರಕೊಂಡ, ನರಸಿಂಹ ಹೆಗಡೆ ಕರೆಮನೆ, ಮಹೇಶ ಹೆಗಡೆ ಮಾಳ್ಕೋಡ ಉಪಸ್ಥಿತರಿದ್ದರು.